Saturday, November 26, 2011

ಸುದ್ದಿಮನೆಯ ದೋಸೆಯೂ ತೂತೆ

-ಹನುಮಂತ ಹಾಲಿಗೇರಿ

ಮೊನ್ನೆಯಷ್ಟೆ ಮಾಧ್ಯಮ ಕಚೇರಿಗಳ ಸುದ್ದಿ ಸಂಪಾದನೆ ವಿಭಾಗಗಳಲ್ಲಿ ಒಂದು ಸುದ್ದಿ ಬಿಸಿ ಬಿಸಿ ಚರ್ಚೆಗೀಡಾಗಿ ಅಷ್ಟೆ ವೇಗದಲ್ಲಿ ಬಿಸಿ ಕಳೆದುಕೊಂಡಿತು. ಉದಯವಾಣಿ ಪತ್ರಿಕೆಯ ವರದಿಗಾರ ಸುರೇಶ್ ಪುದವೆಟ್ಟು ಅವರು ಸಚಿವ ಮುರುಗೇಶ್ ನಿರಾಣಿಯವರ ಭ್ರಷ್ಟಾಚಾರದ ಬಗ್ಗೆ ಒಂದು ಲೇಖನ ಬರೆದಿದ್ದರು. ಇದು ನಿರಾಣಿಯವರ ಕಣ್ಣು ಕೆಂಪಗಾಗಲು ಕಾರಣವಾಗಿರಬೇಕು. ಸುರೇಶ್ ಅವರ ಹೆಂಡತಿ ಮಾನಸ ಪುದುವೆಟ್ಟ ನಿರಾಣಿ ಮಾಲಿಕತ್ವದ ಸಮಯ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಾರಣವಿಲ್ಲದೆ ದೂರದ ಗುಲ್ಬರ್ಗಕ್ಕೆ ವರ್ಗ ಮಾಡಲಾಯಿತು. ಅವರು ಗುಲ್ಬರ್ಗಕ್ಕೆ ಹೋಗಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದರು. ಎಂಥ ವಿಚಿತ್ರ ನೋಡಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಈ ಘಟನೆಯನ್ನು ಸಕ್ರಿಯ ಪತ್ರಕರ್ತರೆಲ್ಲರೂ ತಮ್ಮ ಆತ್ಮೀಯ ವಲಯಗಳಲ್ಲಿ ಗುಸು ಗುಸು ಮಾತಾಡಿದರು. ಒಂದು ಕ್ಷಣ, ಛೆ, ಹೀಗಾಗಬಾರದಿತ್ತು ಎಂದು ನಿಟ್ಟುಸಿರು ಬಿಟ್ಟರು. ಮುಂದಿನ ಕ್ಷಣ ಕ್ಯಾಮರಾ, ಪೆನ್ನು ಪ್ಯಾಡು ಸೇರಿದಂತೆ ಸಾಮಾನು ಸರಂಜಾಮುಗಳನ್ನು ಹೆಗಲೇರಿಸಿಕೊಂಡು ಸುದ್ದಿಗಳ ಬೇಟೆಗೆ ನಡೆದುಬಿಟ್ಟರು. ಅಲ್ಲಿಗೆ ಭರಿ ಗದ್ದಲವೆಬ್ಬಿಸಬೇಕಾದ ಸುದ್ದಿಮನೆಯದೆ ಸುದ್ದಿಯೊಂದು ಹಳತಾಗಿ ಸತ್ತು ಹೋಯಿತು. ರವಿ ಕೃಷ್ಣಾರೆಡ್ಡಿಯವರು ತಮ್ಮ ವರ್ತಮಾನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದನ್ನು ಬಿಟ್ಟರೆ ಈ ಸುದ್ದಿ ಎಲ್ಲಿಯೂ ಸುದ್ದಿ ಮಾಡಲೆ ಇಲ್ಲ.

ಇಂಥ ಘಟನೆ ಯಾವುದೊ ಒಂದು ಕಾರ್ಖಾನೆಯ ಕಾರ್ಮಿಕನ ಮೇಲೆ ನಡೆದಿದ್ದರೆ ಅದರ ಸುದ್ದಿಯೇ ಬೇರೆಯಾಗಿರುತ್ತಿತ್ತು. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದು ಮಾಲಿಕರು ಕ್ಷಮೆ ಕೋರಿ ಮತ್ತೆ ತಮ್ಮ ಆದೇಶವನ್ನು ಹಿಂಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಿತ್ತು. ಆದರೆ ದಿನನಿತ್ಯ ಅಂತಹ ಹತ್ತಾರು ತರಹದ ಪ್ರತಿಭಟನೆಗಳಿಗೆ ಹಾಜರಾಗಿ ವರದಿ ಮಾಡುವ ನಮ್ಮ ಸುದ್ದಿ ಸಂಸ್ಥೆಗಳಿಗೆ ಏನಾಗಿದೆ? ದಿನನಿತ್ಯ ಇಂತಹ ದೌಜನ್ಯಗಳನ್ನು ಸಹಿಸಿ ಮನಸ್ಸು ಜಡಗೊಂಡಿದೆಯೆ? ಇಂಥ ಘಟನೆ ದೌರ್ಜನ್ಯವೆಂದು ಅನಿಸಲೆ ಇಲ್ಲವೆ?

ಕಡೆಪಕ್ಷ ಮಾಧ್ಯಮಗಳ ಮುಖ್ಯಸ್ಥರಾದರೂ ಈ ಬಗ್ಗೆ ದ್ವನಿ ಎತ್ತಬೇಕಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಮೇಯುತ್ತ ಕುಳಿತಿರುವ ಅವರ್ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಾರು. ಯಾರೇನೇ ಹೇಳಲಿ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೋಣದ ಬಗ್ಗೆ ತಲೆಕೆಡಿಸಿಕೊಳ್ಳುವವರ ತಟ್ಟೆಯಲ್ಲಿಯೆ ಕತ್ತೆ ಸತ್ತು ಬಿದ್ದಿದೆ. ಸುದ್ದಿ ಮನೆಯ ದೋಸೆಯೂ ತೂತೆ! ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ಸದಾ ಎಚ್ಚರದ ಸ್ಥಿತಿಯಲ್ಲಿರುವುದನ್ನು ನೋಡಿಕೊಳ್ಳಬೇಕಾದ ಮಾಧ್ಯಮರಂಗವೇ ಕುಲಗೆಟ್ಟುಹೋಗಿದೆ. ಪರಿಶುದ್ಧಗೊಳಿಸಬೇಕಾದ ಗಂಗಾಜಲವೇ ಹೊಲಸುಗಬ್ಬೆದ್ದು ನಾರುತ್ತಿದೆ.

ಪತ್ರಿಕೆ ಎಂದೊಡನೆ ಬಹಳಷ್ಟು ಜನರಿಗೆ `ವಸ್ತುನಿಷ್ಟ’ಎಂಬ ಶಬ್ದ ತಟ್ಟನೆ ತಮ್ಮ ಸ್ಮತಿ ಪಟದಲ್ಲಿ ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಪತ್ರಿಕೋದ್ಯಮ ಇನ್ನು ಬೆಳೆಯುವ ಹಂತದಲ್ಲಿಯೆ ಇರುವಾಗಲೆ ಡಿವಿಜಿಯವರು ಬರೆದಿರುವ `ವೃತ್ತಪತ್ರಿಕೆ’ ಎಂಬ ಪುಸ್ತಕವನ್ನು ಓದಿದರೆ ಪತ್ರಿಕೋದ್ಯಮಕ್ಕೂ ಶಬ್ದಕ್ಕೂ ಇರುವ ನಂಟಿನ ಅರಿವಾಗುತ್ತದೆ. ಪತ್ರಿಕೆಗಳಲ್ಲಿನ ಸುದ್ದಿ ವಸ್ತುನಿಷ್ಟ ಎನ್ನುವ ಕಾರಣಕ್ಕಾಗಿಯೆ ಬಹಳಷ್ಟು ಜನರು ನೂರಕ್ಕೆ ನೂರರಷ್ಟು ನಂಬಿ ಬಿಡುತ್ತಾರೆ. ಆದರೆ ನಂಬುತ್ತಾರೆ ಎಂದು ಗೊತ್ತಿದ್ದೂ ಸುದ್ದಿಕರ್ತರು ಸುಳ್ಳು ಸುದ್ದಿ ಸೃಷ್ಟಿಸುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ.

ಪತ್ರಿಕೋಧ್ಯಮದ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ವಿಜೃಂಭಿಸುವ `ವಸ್ತುನಿಷ್ಟತೆ’ಎನ್ನುವ ಶಬ್ದ, ವಿದ್ಯಾರ್ಥಿ ಮಾದ್ಯಮರಂಗಕ್ಕೆ ಪ್ರಾಯೋಗಿಕವಾಗಿ ಇಳಿದ ನಂತರ ನಿಧಾನಕ್ಕೆ ತನ್ನ ಮರೆಯಾಗುತ್ತಾ ಹೋಗುತ್ತದೆ. ಈ ಮರೆಯಾಗಿಸುವ ಕ್ರಿಯೆಯನ್ನು ಮರಿ ಪತ್ರಕರ್ತ ತನ್ನ ಹಿರಿ ಪತ್ರಕರ್ತರಿಂದಲೆ ಕಲಿಯುತ್ತಾ ಹೋಗುತ್ತಾನೆ. ವಾಸ್ತವ ಪತ್ರಿಕೋದ್ಯಮವೇ ಬೇರೆ, ವಾಸ್ತವವೇ ಬೇರೆ ಎಂದು ಮರಿ ಪತ್ರಕರ್ತನಿಗೆ ಅನಿಸತೊಡಗುತ್ತದೆ. ವೈದ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆಯ ಬಗ್ಗೆ ಪ್ರಮಾಣ ಬೋಧಿಸುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಆ ಸಂಪ್ರದಾಯ ಪತ್ರಿಕೋದ್ಯಮ ಕಾಲೇಜುಗಳಿಗೂ ವಿಸ್ತರಣೆಯಾದಾರೆ ಒಳಿತು ಎನಿಸುತ್ತದೆ.

ಇರುವ ಸುದ್ದಿಗೂ ಮಾಧ್ಯಮಗಳಲ್ಲಿ ಬರುವ ಸುದ್ದಿಗೂ ಬಹುತೇಕ ಸಂದರ್ಭಗಳಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ವರದಿಗಾರನ ಮನೋಸ್ಥಿತಿ, ಹಿನ್ನೆಲೆ, ಪೂರ್ವಾಗ್ರಹಗಳು ಸ್ವಲ್ಪಮಟ್ಟಿಗಾದರೂ ಸುದ್ದಿ ಸಂಪಾದನೆಯಲ್ಲಿ ತಮ್ಮ ಮೂಗನ್ನು ತೂರಿಸಿಯೇ ಬಿಟ್ಟಿರುತ್ತವೆ. ಕೆಲವು ಸಂದರ್ಭದಲ್ಲಿ ವಸ್ತುನಿಷ್ಟತೆ ಸಂಪೂರ್ಣವಾಗಿ ತಿರುಚಲ್ಪಟ್ಟರೂ ಅಡ್ಡಿಯಿಲ್ಲ.

ವರದಿಗಾರ, ಹಿರಿಯ ವರದಿಗಾರ, ಸುದ್ದಿ ಸಂಪಾದಕ-ಸಂಪಾದಕನ ಮೂಲಕ ಹಾದು ಹೋಗುವ ಸುದ್ದಿಗಳು ಪ್ರತಿ ಹಂತದಲ್ಲಿಯೂ ಬದಲಾಗುತ್ತಾ ಹೋಗುತ್ತವೆ. ಕೆಲವೊಮ್ಮೆ ಆಯಾ ಸುದ್ದಿಗಳ ಮೇಲೆ, ಪತ್ರಿಕೆಯ ದೇಯೋದ್ದೇಶ, ಪತ್ರಿಕೆಯ ಮಾಲಿಕನ ಮರ್ಜಿ, ಪ್ರಸರಣ ವಿಭಗ, ಜಾಹಿರಾತು ವಿಭಾಗಗಳು ಪ್ರಭಾವ ಬೀರುತ್ತವೆ. ಈ ಎಲ್ಲ ಹಾದಿಗಳಲ್ಲಿ ಹಾದು ಬಂದ ಮೇಲೆ ಅಳಿದುಳಿದ ಸುದ್ದಿ ಕೆಲವೊಮ್ಮೆ ಸಣ್ಣದಾಗಿ ನಕಾರಾತ್ಮಕಾವಾಗಿಯೂ, ಹಲವೊಮ್ಮೆ ದೊಡ್ಡದಾಗಿ ಸಕಾರಾತ್ಮಕವಾಗಿಯೂ ಪ್ರಕಟನೆಯ ಹಂತಕ್ಕೆ ಬರುತ್ತದೆ. ಅದನ್ನು ಓದುಗ ಓದುತ್ತಾನೆ ಮತ್ತು ನಂಬುತ್ತಾನೆ.

ತಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ವಾಸ್ತವಾಂಶಗಳನ್ನು ಮುಚ್ಚಿಟ್ಟು ಸುದ್ದಿಗಳನ್ನು ಮಾಲಿಕರ, ಜಾಹಿರಾತುದಾರರ, ಸಂಪಾದಕರ ಮರ್ಜಿಗಳಂತೆ (ಓದುಗರ ಮರ್ಜಿಯನ್ನು ಹೊರತು ಪಡಿಸಿ) ತಿರುಚಿ ಬರೆಯುವ ಕೆಲವಾದರೂ ಪ್ರಾಮಾಣಿಕ ಪತ್ರಕರ್ತರಿಗೆ ಒಳಗೊಳಗೆ ಬೇಸರವಿದೆ. ಈ ಬಗ್ಗೆ ಮರುಕವಿದೆ. ಇಂಥವರು ಸುದ್ದಿ ಮನೆಯಿಂದ ಸುದ್ದಿಮನೆಗೆ ಅಲೆದಾಡುತ್ತಲೆ ಇರುತ್ತಾರೆ. ಆದರೆ ಎಲ್ಲ ಸುದ್ದಿ ಮನೆಗಳ ದೊಸೆಯೂ ತೂತೆ ಎಂದು ಅರಿವಾಗುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಆದಾಗ್ಯೂ ತಮ್ಮ ಮಿತಿಯಲ್ಲಿ ಏನಾದರೂ ಮಾಡಬೇಕು ಎಂಬ ತುಡಿತಕ್ಕೆ ಮಿಡಿಯುತ್ತಲೆ ಇರುತ್ತಾರೆ. ಇಂಥ ಪ್ರಾಮಾಣಿಕ ಪತ್ರಕರ್ತರಿಗೆ ಜಾಲತಾಣಗಳು, ಬ್ಲಾಗ್‌ಗಳು ಮರುಭೂಮಿಯಲ್ಲಿ ಕಂಡ ಒಯಸಿಸ್‌ಗಳಾಗಿ ಒದಗುತ್ತಿವೆ. ಸುದ್ದಿ ಮನೆಗಳಲ್ಲಿ ಸುಳ್ಳು-ಪಳ್ಳು ಬರೆದು ಪಾಪ ಮಾಡುವ ಪತ್ರಕರ್ತರು ಜಾಲತಾಣಗಳಲ್ಲಿ ಅನಾಮಧೇಯರ ಹೆಸರಿನನಲ್ಲಿ ಸತ್ಯ ಬರೆದು ಪಾಪ ಪರಿಹಾರ ಮಾಡಿಕೊಳ್ಳುತ್ತಿದ್ದಾರೆ. ಸಂಪಾದಕೀಯ, ಕಾಲಂ 9, ವರ್ತಮಾನದಂತಹ ಕೆಲವು (ನನಗೆ ಗೊತ್ತಿರುವ) ಜಾಲತಾಣಗಳು ಮಾಧ್ಯಮರಂಗದ ಹುಳುಕುಗಳನ್ನು ಹೊರಗೆ ಹಾಕಲಿಕ್ಕೆ ಹುಟ್ಟಿಕೊಂಡಂತೆ ಕೆಲಸ ಮಾಡುತ್ತಿವೆ. ಇನ್ನು ಪತ್ರಿಕಗಳಲ್ಲಿ ತಮ್ಮ ಅಭಿರುಚಿ, ಆಸಕ್ತಿಗಳನ್ನು ತಣಿಸಿಕೊಳ್ಳಲಾಗದ ಹಲವು ಸೃಜನಶೀಲ ಪತ್ರಕರ್ತರು ತಮ್ಮದೊಂದು ಬ್ಲಾಗ್ ಸೃಷ್ಟಿಸಿ ಅವುಗಳಲ್ಲಿ ಕತೆ-ಕವಿತೆಗಳ ಶಿಲ್ಪ ಕೆತ್ತುವುದಕ್ಕೆ ಶುರು ಹಚ್ಚಿಕೊಂಡಿದ್ದಾರೆ.

ಸುದ್ದಿಮನೆ ದೊಸೆಯ ತೂತುಗಳನ್ನು ನೋಡಿ ನೋಡಿ ಬೇಸರಗೊಂಡ ಕೆಲವು ಪತ್ರಕರ್ತರು ಇಂಥದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮೂಗು ತೂರಿಸಲು ಹೋಗದೆ ಸುಮ್ಮನೆ ತಮಗೆ ವಹಿಸಿದ ಅಸೈನ್‌ಮೆಂಟ್‌ಗಳನ್ನು (ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯಂಥವು. ಪೊಲಿಟಿಕಲ್ ರಿಪೋರ್ಟರ್ಸ್ ಭಾಷೆಯಲ್ಲಿ ಹೇಳುವುದಾದರೆ ಚಿಲ್ರೆ ಪಲ್ರೆ ಅಸೈನ್‌ಮೆಂಟ್‌ಗಳು) ಮುಗಿಸಿ ರಂಗಭೂಮಿ, ಸಾಹಿತ್ಯದಂತಹ ಹವ್ಯಾಸಗಳಲ್ಲಿ ಕಳೆದುಹೋಗುತ್ತಾರೆ. ಇಂಥವರಿಗೆ ಹೊಟ್ಟೆ ಹೊರೆಯಲು ಇದೊಂದು ಉದ್ಯೋಗವಷ್ಟೆ. ಬಹುತೇಕ ನಾನು ಇಂಥವರ ಸಾಲಿಗೆ ಸೇರುತ್ತೇನೆ ಎಂದರೆ ಅಡ್ಡಿಯಿಲ್ಲ.